ವಿಭಾಗಗಳು

Friday, January 3, 2014

ಶ್ರೀ ಆಂಜನೇಯ ಸ್ವಾಮಿ ಪೂಜೆ - 2013


ಲೇಖಕರು: ಪಿ.ಎಸ್.ರಂಗನಾಥಮಸ್ಕತ್ 
ಓಮಾನ್ ಕರ್ನಾಟಕ ಆರಾಧಾನ ಸಮಿತಿಯು (ಓಂಕಾರ) ಕಳೆದ ವರ್ಷ ೨೦೧೨ ರಲ್ಲಿ ಆಯೋಜಿಸಿದ್ದಂತೆ ಈ ಬಾರಿ ೨೭ ಡಿಸೆಂಬರ್ ೨೦೧೩ ರಂದು ಶ್ರೀ ಆಂಜನೇಯ ಪೂಜೆ ಯನ್ನು ಮಸ್ಕತ್ ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದರು. ಬೆಳಿಗ್ಗೆ ೮:೩೦ ಪ್ರಾರ್ಥನೆ ಯಿಂದ ಶುರುವಾದ ಕಾರ್ಯಕ್ರಮ, ಸಂಕಲ್ಪ, ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಹಾ ಅಭಿಷೇಕ, ಸುವರ್ಣ ಕಿರೀಟ ಸಮರ್ಪಣೆ, ಅಲಂಕಾರ, ಹರಿವಾಯುಸ್ತುತಿ, ಹನುಮಾನ್ ಚಾಲೀಸ, ಭಜನೆ, ಮಹಾ ಮಂಗಳಾರತಿ ತದನಂತರ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು. 

ಬೆಳಿಗ್ಗೆ ೮:೩೦ ರಿಂದ ಪೂಜೆಗೆ ಆಗಮಿಸಿದ ಸಾವಿರಾರು ಭಕ್ತರು, ಮಧ್ಯ್ಹಾನ ಮಹಾ ಪ್ರಸಾದ ವಿನಿಯೋಗದ ವರೆವಿಗೂ ಪಾಲ್ಗೊಂಡು ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ ವಾಗಿತ್ತು. ಜತೆಗೆ ಹಲವಾರು ಸ್ವಯಂ ಸೇವಾ ಕಾರ್ಯಕರ್ತರು, ಸಾರ್ವಜನಿಕ ಭಕ್ತರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ತನು, ಮನ, ಧನದ ಸಹಕಾರ ನೀಡಿ ಪೂಜೆಯ ಯಶಸ್ಸಿಗೆ ಕಾರಣೀಭೂತರಾದರು. ಶ್ರೀ ಆಂಜನೇಯ ಸ್ವಾಮಿ ಪೂಜೆ ಬಹು ವಿಜ್ರಂಭಣೆ ಯಿಂದ ನಡೆದಿದ್ದಕ್ಕೆ ಈ ಸಂಧರ್ಭದಲ್ಲಿ ಸಾವಿರಾರು ಜನರು ಸಾಕ್ಷಿಗಳಾದರು. ಅದರಲ್ಲೂ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಕನ್ನಡದ ಕಲರವ ಹಿಂದೆಂದಿಗಿಂತಲೂ ಮಾರ್ದನಿಸುತಿತ್ತು.
ಪೂರ್ವಭಾವಿ ತಯಾರಿ: ಪೂಜಾಕಾರ್ಯಕ್ರಮದ ಪೂರ್ವಭಾವಿ ತಯಾರಿಕೆಯೊಂದಿಗೆ ಕಾರ್ಯಕಾರಿ ಸಮಿತಿ, ಉತ್ಸಾಹಿ ಸ್ವಯಂ ಸೇವಾ ಕಾರ್ಯಕರ್ತರ ತಂಡ ಕಳೆದ ಹಲವಾರು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಭಾಗಿಗಳಾದರು. ಪೂಜೆಗಾಗಿ ಬೆಂಗಳೂರಿನಿಂದ ವಿಶೇಷವಾಗಿ ಹೂವು, ಪೂಜ ಸಾಮಗ್ರಿ, ಶಲ್ಯ ಹಾಗು ಒಂದು ಸಾವಿರ ಹನುಮಾನ್ ಚಾಳಿಸಾ ಕನ್ನಡ, ಹಿಂದಿ/ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದರು.

ಪೂಜಾ ವೇದಿಕೆ: ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂ ಸೇವಾ ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ಪುಷ್ಪಾಲಂಕಾರದೊಂದಿಗೆ , ಮಧ್ಯದಲ್ಲಿ ಬೃಹತ್ ಶ್ರೀ ಆಂಜನೇಯ ಚಿತ್ರಪಟ ಅದರ ಮುಂದೆ ಸುಂದರ ಶ್ರೀ ಆಂಜನೇಯ ವಿಗ್ರಹ, ಎರಡು ಬದಿಗಳಲ್ಲಿ ಶ್ರೀ ಆಂಜನೇಯ ಮತ್ತು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾದೇವಿ ಕಟೌಟ್ ಇರಿಸಿದ್ದು, ಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು.

ಪೂಜಾ ವಿಧಿ ವಿಧಾನ:- ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಶ್ರೀ ಲಕ್ಷ್ಮಿನಾರಾಯಣ ಆಚಾರ್ಯರು ಪ್ರಾರಂಭಿಸಿದರು. ಶ್ರೀ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ನಂತರ, ಪಂಚಾಮೃತ ಹಾಗು ಗಂಧದ ಮಹಾಅಭಿಷೇಕ ನೆರೆವೇರಿಸಿದರು. ಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡಿ, ನಂತರ ಅಲಂಕಾರ, ಪೂಜೆ ಮತ್ತು ವಡಮಾಲ ಸಮರ್ಪಣೆ ಮಾಡಿದರು.

ಭಜನೆ ಮತ್ತು ಭಕ್ತಿ ಗೀತೆಗಳು: ರಾಮ ರಕ್ಷಾ ಸ್ತೋತ್ರ, ಪವಮಾನ, ಹರಿವಾಯು ಸ್ತುತಿ, ಹನುಮಾನ್ ಚಾಳಿಸಾ, ಆಂಜನೇಯ ಸ್ತೋತ್ರ, ಗಣಪತಿ, ಶ್ರೀಕೃಷ್ಣ, ಲಕ್ಷ್ಮಿ ದೇವಿ, ರಾಮನಾಮ, ಇನ್ನು ಮುಂತಾದ ದೇವರ ಹಾಡುಗಳನ್ನು, ಡಿವೈನ್ ಪಾರ್ಕ್, ತುಳುಕೂಟ, ಸಾಯಿ ಸಮಿತಿ, ಮತ್ತು GSB Group ನವರು ಹಾಡಿ ಭಕ್ತರನ್ನು ಭಾವ ಪರವಶಗೊಳಿಸಿದರು, ಕನ್ನಡದ ಭಕ್ತಿ ಗೀತೆಗಳು, ದೇವರ ನಾಮ, ಭಜನೆ ಗಳಿಂದ ಸಭಾಂಗಣದಲ್ಲಿ ವಿಶೇಷ ಮೆರುಗನ್ನು ನೀಡಿತ್ತು. ತಮಿಳುನಾಡು ಚೆನ್ನೈ ನಿಂದ ವಿಶೇಷವಾಗಿ ಬಂದಿದ್ದ ಶ್ರೀ ವಾಸುದೇವರಾವ್ (ಮೂಲತಃ ಬೆಂಗಳೂರಿನವರು) ಹರಿ ವಾಯು ಸ್ತುತಿ ಪಠಣ ಮಾಡಿದರು. ಶ್ರೀಯುತರು ಹರಿವಾಯುಸ್ತುತಿ ಯಲ್ಲಿ ಪಾರಂಗತರಾಗಿದ್ದು, ಭಾರತ ದೇಶದ ಎಲ್ಲೆಡೆ ಹಾಗು ವಿದೇಶಗಳಲ್ಲಿ ಸಹ ಸಾವಿರಾರು ಕಡೆ ಪಠಣ ಮಾಡಿದ್ದಾರೆ.

ಮಹಾಪ್ರಸಾದ ವಿತರಣೆ: ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ದೇವಸ್ಥಾನದ ಆವರಣ ದಲ್ಲಿ ಅತ್ಯಂತ ರುಚಿಯಾದ ಭೋಜನವನ್ನು ಮಹಾಪ್ರಸಾದವನ್ನಾಗಿ ಸ್ವೀಕರಿಸಿದ ಭಕ್ತ ಸಮೂಹ ಓಂಕಾರ ಸಮಿತಿಯವರನ್ನು ಎಲ್ಲೆಡೆ ಪ್ರಶಂಸಿತಿದ್ದುದ್ದನ್ನು ಕಂಡು ಬಂತು, ಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಕಾರ್ಯಕರ್ತರ ತಂಡ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಸೇವಾ ವಿವರ: ಸಾರ್ವಜನಿಕರಿಗೆ, ಮಹಾಪ್ರಸಾದ ಸೇವೆ, ಸರ್ವ ಸೇವೆ, ಹರಿವಾಯುಸ್ತುತಿ/ ಹನುಮಾನ್ ಚಾಲಿಸಾ ಪಾರಾಯಣ, ಹಾಗೂ ವಡಮಾಲೆ ಸಮರ್ಪಣೆ ಸೇವೆಯ ಸೌಲಭ್ಯ ನೀಡಿದ್ದರು, ಸೇವೆಸಲ್ಲಿಸಿದ ಭಕ್ತರಿಗೆ, ಫಲ ಪುಷ್ಪ, ತಾಂಬೂಲದೊಂದಿಗೆ ಸೇವೆಗೆ ತಕ್ಕಂತೆ ಓಂಕಾರ ಮುದ್ರಿತ ಬೆಳ್ಳಿನಾಣ್ಯ ಗಳನ್ನು ನೀಡಲಾಯಿತು

ಓಂಕಾರ ಸಮಿತಿಯ ವಿಶೇಷ ವೇನೆಂದರೆ, ಇಲ್ಲಿ ಅಧ್ಯಕ್ಷ, ಉಪಾದ್ಯಕ್ಷ, ಖಜಾಂಚಿ ಎನ್ನುವ ಯಾವುದೇ ಹುದ್ದೆ ಗಳನ್ನು ಹೊಂದಿಲ್ಲದೆ ಎಲ್ಲ ಕಾರ್ಯಕರ್ತರು ಸ್ವಯಂ ಪ್ರೇರಣೆ ಯಿಂದ ತಮಗೆ ವಹಿಸಿದ ಕೆಲಸವನ್ನು ಕೆಲಸವನ್ನು ಅಚ್ಚುಕಟ್ಟಾಗಿ ಜವಬ್ದಾರಿಯಿಂದ ನಿರ್ವಹಿಸಿ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಈ ಸಮಿತಿಯು, ಇದುವರೆಗೂ ಶ್ರೀ ಆಂಜನೇಯ ಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತಾವಧಾನಿ ಡಾ| ರಾ. ಗಣೇಶ್ ರವರಿಂದ ಓಂಕಾರ ಜ್ಞಾನಾಮೃತ - ೨೦೧೩, ಮತ್ತು ಡಾ. ವಿಧ್ಯಾಭೂಷಣರವರಿಂದ ನಾದಾಮೃತ - ೨೦೧೩ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಸ್ಕತ್ ಕನ್ನಡಿಗರಿಗೆ ಭಕ್ತಿ, ಜ್ಞಾನಾ ಮತ್ತು ಸಂಗೀತ ರಸದೌತಣವನ್ನು ನೀಡಿದೆ.

ಓಮಾನ್ ಕರ್ನಾಟಕ ಆರಾಧಾನ ಸಮಿತಿಯು ಶ್ರೀ ಆಂಜನೇಯ ಪೂಜೆಯನ್ನು ಅಯೋಜಿಸಿ, ಭಕ್ತಾಧಿಬಂಧುಗಳಿಗೆ ಅವಕಾಶವನ್ನು ಕಲ್ಪಿಸಿ ಯಶಸ್ಸು ಪಡೆದ ಸರ್ವರಿಗೂ ನಾವು ಒಮಾನ್ ಕನ್ನಡಿಗರ ಪರವಾಗಿ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಪಿ.ಎಸ್.ರಂಗನಾಥಮಸ್ಕತ್

No comments:

Post a Comment